ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

‘ಕ’ ‘ಮ’ ‘ಲ’ ‘ಮ್ಮ’ ನಾಲ್ಕೇ ಅಕ್ಷರಗಳು…

ಅಮ್ಮ, ಇದು ನಾನು, ನಿನ್ನ ಕೊನೇ ಮಗ!Amma

ಇದೆಂಥ ವಿಚಿತ್ರ ನೋಡು!

ನನ್ನ ಐವತ್ತೆರಡನೇ ವಯಸ್ಸಿನಲ್ಲಿ;
ನಿನ್ನ 85-86 ರ ಹರೆಯದಲ್ಲಿ;
ನಾನು ನಿನಗೊಂದು ಕಾಗದ ಬರೀತಾ ಇದ್ದೀನಿ.
ಇದು ನಾನು ನಿನಗೆ ಬರೆಯುತ್ತಿರುವ ಮೊದಲನೆಯ ಪತ್ರ!<a

ಹೌದು,
ನಾನು ನಿಂಗೆ ಯಾವತ್ತೂ ಕಾಗದ ಬರೆದೇ ಇಲ್ಲ.
ಯಾಕೇಂದ್ರೆ, ನಿಂಗೇಂತ ಒಂದು ಅಡ್ರೆಸ್ಸೇ ಇರಲಿಲ್ಲ!

ನೀನು ಹುಟ್ಟಿದ ಮನೇಲಿ ಯಾವುದೇ ಕಾಗದ-ಪತ್ರ ಬಂದ್ರೂ ಅದು ನಿಮ್ಮಪ್ಪನ ಹೆಸ್ರಿಗೆ ಬರತ್ತಿದ್ದವು. ಆಮೇಲೆ ಅರವತ್ತೆರಡು ವರ್ಷಗಳ ಹಿಂದೆ, ನೀನು ಮದ್ವೆಯಾಗಿ ಬಂದ ಮೇಲೆ ಯಾವುದೇ ಲೆಟರ್ ಬಂದ್ರೂ ಅದು ನಮ್ಮ ಅಪ್ಪನ ಹೆಸ್ರಿಗೆ ಬರೋಕೆ ಶುರುವಾಯಿತು. ಈಗ ನೀನು ಮುದುಕಿ ಆಗಿದ್ದೀಯ. ಮಕ್ಕಳೂ ನಿಂಗೆ ಕಾಗದ ಬರೆಯೋಲ್ಲ; ಇನ್ನು ಮೊಮ್ಮಕ್ಕಳನ್ನಂತೂ ಕೇಳಲೇ ಬೇಡ. ಇನ್ಯಾರು ನಿಂಗೆ ಲೆಟರ್ ಬರೀಬೇಕು ಹೇಳು? ಹೋಗಲಿ ಈ ಎಸ್‌ಎಮ್‌ಎಸ್ ಯುಗದಲ್ಲಿ ನಿಂಗೆ ಒಂದು ಮೆಸೇಜ್ ಕಳಿಸೋಣ ಅಂದ್ರೆ, ನೀನು ಅದನ್ನ ಓದೋದು ಹೇಗೆ?!

ಹಾಗಂತ ನಿಂಗೆ ಇಂಪಾರ್ಟೆನ್ಸ್ ಏನೂ ಕಮ್ಮಿ ಇರಲಿಲ್ಲ ಬಿಡು. ನಾನೇ ಓದಿದ್ದೀನಿ. ಆಗೆಲ್ಲಾ ಯಾರೇ ಕಾಗದ ಬರೆದ್ರೂ ಆ ಪತ್ರದ ಕೊನೆಯ ಸಾಲಿನಲ್ಲಿ ನಿಂಗೊಂದು ಸಾಲಿರುತ್ತಿತ್ತು. ದೊಡ್ಡೋರು ಬರೆದಿದ್ರೆ ಹಕುಂಶೋಚಿಸೌ ಕಮಲಮ್ಮನಿಗೂ ನನ್ನ ಆಶೀರ್ವಾದಗಳು. ಚಿಕ್ಕೋರಾಗಿದ್ರೆ, ‘ಬೇಡುವ ಆಶೀರ್ವಾದಗಳು’.

ಅದಕ್ಕೇ ಹೇಳಿದ್ದು ಹುಟ್ಟಿದ ಡೇಟ್ ಗೊತ್ತಿಲ್ಲದ; ಓದು ಗೊತ್ತಿಲ್ಲದ; ಅಡ್ರೆಸ್ಸಿಲ್ಲದ ವ್ಯಕ್ತಿ ನೀನು. ನಮ್ಮಮ್ಮ! ಕಮಲಮ್ಮ!!

ಬೇಜಾರಾಯ್ತಾ? ಬರ್ತ್‌ಡೇ ಗೊತ್ತಿಲ್ಲದೋಳು, ಓದೋಕೆ ಬರದೇ ಇರೋಳು ಅಂದಿದ್ದಕ್ಕೆ? ಏನ್ ಮಾಡೋದು? ಅದು ಫ್ಯಾಕ್ಟ್.

ಹೋಗಲುಬಿಡು. ಅಣ್ಣ, ಅಂದ್ರೆ ನಮ್ಮಪ್ಪ ತೀರಿಕೊಂಡು ಹತ್ತು ವರ್ಷ ಆಗ್ತಾ ಬಂತು. ನೀನೊಬ್ಬಳೇ ತುಮಕೂರು ಜಿಲ್ಲೆಯ ದಂಡಿನಶಿವರ ಅನ್ನೋ ನನ್ನೂರಲ್ಲಿ ಇದ್ದೀಯ. ಈಗಲಾದ್ರು ನಿಂಗೊಂದು ಅಡ್ರೆಸ್ ಇರಲೇ ಬೇಕಲ್ಲ?

ಹೌದು, ಇದೆ. ಆದ್ರೆ ಆ ಅಡ್ರೆಸ್ ಹೇಗಿರುತ್ತೆ ಗೊತ್ತಾ?
ದಿವಂಗತ ಡಿ.ಸಿ.ಪಟ್ಟಾಭಿರಾಮಯ್ಯ, ಇವರ ಧರ್ಮಪತ್ನಿ ಕಮಲಮ್ಮ!

ಪಾಪ! ಇಲ್ಲೂ ನೀನು ಸೆಕೆಂಡ್ ಗ್ರೇಡ್ ಸಿಟಿಜನ್!!

ಹೋಗಲಿ ಹೇಗೋ ಒಂದು ಅಡ್ರೆಸ್ ಆದ್ರೂ ಇದೆಯಲ್ಲಾ ಅಂತ ಯಾರಾದ್ರೂ ಕಾಗದ ಬರೀತಾರ ಅಂದ್ರೆ ಅದೂ ಇಲ್ಲ. ಎಲ್ಲಾ ಫೋನಲ್ಲೇ ವ್ಯವಹಾರ. ನಿನ್ನ ಅಡ್ರೆಸ್‌ಗೆ ಬರೋದು ಎರಡೇ ಕಾಗದ. ಒಂದು ಕೆ‌ಇಬಿ ಬಿಲ್ಲು, ಇನ್ನೊಂದು ಟೆಲಿಫೋನ್ ಬಿಲ್ಲು, ಅಷ್ಟೇ!

ಅದಕ್ಕೇ ಈಗೊಂದು ಕಾರಣ ಸಿಗ್ತು ಅಂತ ನಾನೇ ಒಂದು ಕಾಗದ ಬರೀತಾ ಇದ್ದೀನಿ ನಿಂಗೆ. ಈ ಪತ್ರ ನಾನಾಗೇ ಏನು ಬರೀತಾ ಇಲ್ಲ. ನನ್ನ ಸ್ನೇಹಿತರೊಬ್ಬರು ‘ಅಮ್ಮಂದಿರ’ ಬಗ್ಗೆ ಒಂದು ಪುಸ್ತಕ ತರತಾ ಇದ್ದೀವಿ, ಒಂದು ಲೇಖನ ಬರೆದುಕೊಡಿ ಅಂದ್ರ. ಲೇಖನ ಬರೆಯೋಕೆ ಹೊಳೀತಿಲ್ಲ, ಅದ್ಕೆ ಲೆಟರ್ ಬರೀತಾ ಇದ್ದೀನಿ.

ಆದ್ರೆ ದುರಾದೃಷ್ಟ ನೋಡು, ನಾನು ಏನು ಬರೆದ್ರೂ ನಿಂಗೆ ಅದನ್ನ ಓದೋಕಾಗಲ್ಲ. ಈ ವಿಚಾರದಲ್ಲಿ ನಮ್ಮ ತಾತನೇ ನಿಂಗೆ ವಿಲನ್! ನಿನ್ನ ಓದನ್ನ ಮೂರನೇ ಕ್ಲಾಸಿಗೇ ನಿಲ್ಲಿಸಿ ಬಿಟ್ರಂತಲ್ಲ! ಆದ್ರೂ ನೋಡು. ನಮ್ಮ ಅಣ್ಣಾವ್ರು, ಡಾ.ರಾಜ್‌ಕುಮಾರ್. ಓದಿದ್ದು ಮೂರನೇ ಕ್ಲಾಸು. ಆದ್ರೆ ಮುಂದೆ ಎಷ್ಟು ಚನ್ನಾಗಿ ಓದೋದು ಬರೆಯೋದು ಕಲಿತು ಬಿಟ್ರು! ಇದು ನಿನ್ನ ಕೈನಲ್ಲಿ ಯಾಕೆ ಆಗಲಿಲ್ಲ?

ನಿನ್ನ ಮದ್ವೆಯಾದ ಮೇಲೆ ನಮ್ಮ ಅಪ್ಪನೂ, ‘ಕಮಲಾ, ನೀನು ಮೇಷ್ಟ್ರ ಹೆಂಡತಿಯಾಗಿ ಓದೋದು ಬರೆಯೋದು ಮಾಡ್ದೇ ಇದ್ರೆ ನಂಗೆ ಅವಮಾನ ಕಣೇ. ನಾನು ಸ್ಕೂಲ್‌ನಲ್ಲಿ ಮಕ್ಳಿಗೆಲ್ಲ ಪಾಠ ಹೇಳ್ತೀನಿ, ಇಲ್ಲಿ ಮನೇಲಿ ನಿಂಗೆ ಅಕ್ಷರಾಭ್ಯಾಸ ಮಾಡಿಸ್ತೀನಿ ಬಾ…’ ಅಂತ ಕೂರಿಸ್ಕೊಂಡು ಸ್ಲೇಟು-ಬಳಪ ಹಿಡಿದು ವರ್ಷಗಟ್ಟಲೆ ತಿದ್ದಿಸಿದ್ರಂತೆ.

ಆದ್ರೆ ನೀನು ಕಲಿತಿದ್ದ ನಾಲ್ಕೇ ಅಕ್ಷರಗಳು!

‘ಕ’ ‘ಮ’ ‘ಲ’ ‘ಮ್ಮ’

ಈಗಲೂ ನೀನು ಪೆನ್ಷನ್ ತಗೊಳೋಕೆ ಅಂತ ಸೈನ್ ಮಾಡ್ತೀಯಲ್ಲ, ಆಗ ನೋಡಬೇಕು. ಒಂದೊಂದು ಅಕ್ಷರವೂ ಒಂದೊದು ದೇಶದ ಮ್ಯಾಪ್ ಇದ್ದಂಗಿರುತ್ತೆ. ಅದಕ್ಕೇ ನಾವು ನಾಲ್ಕು ಜನ ಮಕ್ಕಳಿಗೊಂದು ಧೈರ್ಯ. ಮುಂದೊಂದು ದಿನ ನಿನ್ನ ಸಹೀನ ನಾವು ಸುಲಭವಾಗಿ ಫೋರ್ಜರಿ ಮಾಡಬಹುದು. ಯಾರಿಗೂ ಗೊತ್ತಾಗಲ್ಲ.

ಇರಲಿ ಬಿಡು.

ನಿಂಗೊತ್ತಾ? ನನ್ನ ಹತ್ರ ನೀನು ಸೈನ್ ಮಾಡಿ ಕೊಟ್ಟಿರೋ ಒಂದು ಚೀಟಿ ಇದೆ. ಈಗ ಅದನ್ನ ನನ್ನ ಮುಂದೆ ಇಟ್ಟುಕೊಂಡೇ ಈ ಕಾಗದ ಬರೀತಾ ಇದ್ದೀನಿ. ಅದು ಯಾವುದೂ ಅಂತ ತಲೇ ಕೆಡಿಸ್ಕೋತಾ ಇದ್ದೀಯಾಮ್ಮ? ಆ ಕತೆ ಹೇಳ್ತೀನಿ ಕೇಳು.

ಇಲ್ಲಿಗೆ ಸರಿಯಾಗಿ ಇಪ್ಪತ್ತೊಂಬತ್ತು ವರ್ಷಗಳ ಹಿಂದೆ ನಾನು ಊರಿಂದ -ಓಡಿ- ಬೆಂಗಳೂರಿಗೆ ಬಂದ ಮೇಲೆ ನಾನೊಂದು ಪುಸ್ತಕ ಅಂಗಡೀಲಿ ಕೆಲಸಕ್ಕೆ ಸೇರಿಕೊಂಡೆ. 1985 ನೇ ಇಸವಿ ಜುಲೈ ತಿಂಗಳು. ನನ್ನ ಮೊದಲ ತಿಂಗಳ ಎಷ್ಟು ಗೊತ್ತಾ? ಬರೋಬ್ಬರಿ 275 ರೂಪಾಯಿ!

ನೆನಪಿದೆಯಾ ನಿಂಗೆ? ಆ ಸಂಬಳದಲ್ಲಿ ನಿಂಗೆ ಐವತ್ತು ರೂಪಾಯಿ ಎಂ.ಓ.ಕಳಿಸಿದ್ದೆ. ನಿನ್ನಿಂದ Acknowledgement ಬೇಕು ಅನ್ನೋ ಕಾರಣಕ್ಕೆ ನಿಂಗೆ ಓದೋಕೆ ಬರೋಲ್ಲ ಅಂತ ಗೊತ್ತಿದ್ರೂ ಎಂ.ಓ. ಫಾರಂನ ಕೊನೆಯಲ್ಲಿ, ‘ಪ್ರೀತಿಯ ಅಮ್ಮ, ಈ ಹಣ ತಲಪಿದ್ದಕ್ಕೆ ತಪ್ಪದೆ ತಿಳಿಸುವುದು’ ಎಂದು ಒಂದೇ ಒಂದು ಸಾಲು ಬರೆದಿದ್ದೆ.

ಆವತ್ತು ನಮ್ಮೂರಿನ ಅಂಚೆಯ ಗುಂಡಣ್ಣ ಮಾಮೂಲಿನಂತೆ ಬೆಳಗ್ಗೆ ಹನ್ನೊಂದು ಗಂಟೆ ಹೊತ್ತಿಗೆ ಮನೆ ಮುಂದೆ ನಿಂತು ಜೋರಾಗಿ ‘ಕಮಲಮ್ಮಾ..’ ಅಂತ ಕೂಗಿದಾಗ ನಿಂಗ್ ಆಶ್ಚರ್ಯ ಆಯ್ತಂತೆ. ಯಾವಾಗ್ಲೂ ‘ಮೇಷ್ಟ್ರೇ..’ ಅಂತ ಕೂಗೋ ಈ ಗುಂಡಣ್ಣ ಇವತ್ತು ಯಾಕೆ ನನ್ನ ಹೆಸರನ್ನ ಕೂಗ್ತಾ ಇದ್ದಾನೆ ಅಂತ. ಆಗ ಅಲ್ಲೇ ಇದ್ದ ಅಣ್ಣ ‘ನಾನಿಲ್ಲೇ ಇದ್ದೀನಿ ಗುಂಡಣ್ಣ, ಏನ್ಸಮಾಚಾರ?’ ಅಂದ್ರಂತೆ. ಅದಕ್ಕೆ ಗುಂಡಣ್ಣ, ‘ನೀವು ಬೇಡ ಮೇಷ್ಟ್ರೆ, ಕಮಲಮ್ಮನೇ ಬೇಕು’ ಅಂತ ಹೇಳಿ ನಿನ್ನನ್ನ ಮುಂಬಾಲಿಗೆ ಕರೆಸಿ, ಎಂ.ಓ. ಫಾರಂ ಕೈನಲ್ಲಿಟ್ಟು ಇದ್ರಲ್ಲಿ ಒಂದು ಸಹಿ ಮಾಡೀಮ್ಮ ಅಂದ್ರಂತೆ.

ನೀನು ಅದನ್ನ ಗೋಡೆಗೆ ಒತ್ತಿಟ್ಟುಕೊಂಡು ನಿಧಾನವಾಗಿ ಸಹಿ ಮಾಡಿ ಕೊಟ್ಟೆಯಂತೆ. ಗುಂಡಣ್ಣ, ‘ನಿಮ್ಮಗ ನಿಮಗೆ ದುಡ್ಡು ಕಳ್ಸಿದ್ದಾನೆ’ ಅಂತ ನಿಂಗೆ ಐವತ್ತು ರೂಪಾಯಿ ಕೊಟ್ಟು ನಂಗೆ ಅಕ್ನಾಲೆಡ್ಜ್‌ಮೆಂಟ್ ಕಳಿಸಿದ್ದ. ಅದೇ ಚೀಟೀ ಬಗ್ಗೇನೆ ನಾನು ಈಗ ಹೇಳಿದ್ದು. ಆವತ್ತೆಲ್ಲ ಅಣ್ಣ ‘ಥಕ ತೈ… ಥಕ ತೈ’ ಅಂತ ಕುಣೀತಾ ಇದ್ರಂತಲ್ಲ? ‘ನೋಡೆ, ನಿನ್ನ ಮಗ ದೊಡ್ಡಮನುಷ್ಯ. ತಾನೂ ದುಡೀ ಬಲ್ಲೆ ಅಂತ ಜಂಬ ಕೊಚ್ಕಳೋಕೆ ಐವತ್ತು ರೂಪಾಯಿ ಕಳ್ಸಿದ್ದಾನೆ. ಅಯೋಗ್ಯ ತಂದು..’ ಎಂದು ಮೇಲಕ್ಕೂ-ಕೆಳಕ್ಕೂ ಓಡಾಡ್ತಿದ್ರಂತಲ್ಲ! ನೀನೇ ಹೇಳಿದ್ದೆ. ಅದು ಅಣ್ಣನ ಕೋಪ ಅಲ್ಲ ಜಲಸಿ.. ಅಸೂಯೆ! ನಾನು ನಿಂಗೆ ಮಾತ್ರ ದುಡ್ಡು ಕಳ್ಸಿ ಅವರನ್ನ ಇಗ್ನೋರ್ ಮಾಡಿದ್ನಲ್ಲ ಅಂತ!

ಅದರ ಮಾರನೇ ದಿನಾನೆ, ಅದೇ ಗುಂಡಣ್ಣ ಮತ್ತೆ ಮನೆ ಮುಂದೆ ನಿಂತು, ‘ಮೇಷ್ಟ್ರೇ..’ ಅಂತ ಕೂಗಿ, ಅವರ ಕೈನಲ್ಲೂ ಎಂ.ಓ.ಫಾರಂ ಕೊಟ್ಟು ಸೈನ್ ಹಾಕಿಸಿಕೊಂಡು ಐವತ್ತು ರೂಪಾಯಿ ಕೊಟ್ಟು ಹೋದಾಗ ನೀನು ಬಾಗಿಲು ಮರೇಲಿ ನಿಂತ್ಕೊಂಡು ಮುಸಿ ಮುಸಿ ಅಂತ ನಗತಾ ಇದ್ದೆಯಂತೆ?

ಅಣ್ಣನ ಹೆಸ್ರಿಗೆ ಒಂದಿನ ತಡವಾಗಿ ದುಡ್ಡು ಕಳಿಸೋ ಐಡಿಯಾನ ನಾನು ಬೇಕಂತಲೇ ಮಾಡಿದ್ದೆ. ಆದ್ರೆ ನೋಡು. ಈಗ ಅಣ್ಣ ಇಲ್ಲ. ಆದ್ರೆ ಅವರು ಸೈನ್ ಮಾಡಿಕೊಟ್ಟಿರೋ Acknowledgement ನನ್ನ ದಾಖಲೇಲಿ ಭದ್ರವಾಗಿದೆ. ನಿಮಗೆ ಆವತ್ತು ಬೇಜಾರು ಮಾಡಿದ್ದಕ್ಕೆ ಸ್ಸಾರಿ ಅಣ್ಣ…

ನಂಗೊತ್ತು. ಆಗ ನಿಮ್ಮಿಬ್ಬರಿಗೂ ನನ್ನ ಈ ಐವತ್ತು ರೂಪಾಯಿಯ ಅವಶ್ಯಕತೆ ಖಂಡಿತ ಇರಲಿಲ್ಲ. ನಿಮ್ಮ ಮಾತು ಮೀರಿ ಬೆಂಗಳೂರಿನಲ್ಲಿ ಬಂದಿದ್ದ ನನಗೆ ನನ್ನ ಅಹಂಕಾರನ ಪ್ರದರ್ಶಿಸ ಬೇಕಿತ್ತು. ನಿಮ್ಮ ನೆರವಿಲ್ಲದೆ ನಾನೂ ಸಂಪಾದಿಸಬಲ್ಲೆ ಅಂತ ನಿಮಗೆ, ಅದ್ರಲ್ಲೂ ಮುಖ್ಯವಾಗಿ ಅಣ್ಣಂಗೆ ತೋರಿಸೋ ಕೆಟ್ಟ ಹಠ ಇತ್ತು. ಈಗ ಆ ಹುಚ್ಚಾಟ ಎಲ್ಲ ನೆನಸಿಕೊಂಡ್ರೆ ನಂಗೇ ನಗು ಬರುತ್ತೆ. ಆದ್ರೂ ಆ ಹುಚ್ಚಾಟದಿಂದ ನನ್ನ ಹತ್ರ ನಿಮ್ಮಿಬ್ಬರ ಸಹಿ ಇರೋ ಈ ಫಾರಂ ಇವೆಯಲ್ಲ, ಇದಕ್ಕೆ ಎಷ್ಟು ಬೆಲೆ ಕಟ್ಟೋಕೆ ಸಾಧ್ಯ?

ಎಂಥ ಮಧುರವಾದ ನೆನಪುಗಳು ಇವು!

ಆಮೇಲೆ ಒಂದೆರಡು ತಿಂಗಳು ಕಳೆದ ಮೇಲೆ ನಾನು ಒಂದು ದಿನದ ರಜೆ ಮೇಲೆ ಊರಿಗೆ ಬಂದಿದ್ದಾಗ ನನಗೆ ಆ ಐವತ್ತು ರೂಪಾಯಿಯ ಬಗ್ಗೆ ತಿಳಿದುಕೊಳೋ ಕುತೂಹಲ. ಆದರೆ ನೀನಾಗಲೀ, ಅಣ್ಣನಾಗಲೀ ಅದರ ಬಗ್ಗೆ ಬಾಯೇ ಬಿಡಲಿಲ್ಲ! ನಾನಾಗೇ ಮೇಲೆ ಬಿದ್ದು ಕೇಳೋಕೆ ನನಗೆ ಮುಜಗರ. ಸುಮ್ಮನೇ ಇದ್ದುಬಿಟ್ಟೆ. ಕೊನೆಗೆ ಆವತ್ತು ಸಂಜೆ ನಿನ್ನ ಜೊತೆ ತೋಟಕ್ಕೆ ಹೋಗುತ್ತಾ ದಾರಿಯಲ್ಲಿ ಮರ್ಯಾದೆ ಬಿಟ್ಟು ಕೇಳಿದ್ದೆ. ‘ಅಮ್ಮಾ, ಆವತ್ತು ಕಳಿಸಿದ ನನ್ನ ಐವತ್ತು ರೂಪಾಯಿ ನಿಂಗೆ ಸಿಕ್ಕಿತಾ?’ ನೀನು ರಸ್ತೆ ನೋಡ್ತಾ ಸುಮ್ಮನೇ ಹೂಗುಟ್ಟಿದೆ. ಮುಖ್ಯವಾಗಿ ನನಗೆ ಅಣ್ಣನ ಪ್ರತಿಕ್ರಿಯೆ ಬೇಕಿತ್ತು. ಅವರು ಆ ಐವತ್ತು ರೂಪಾಯಿ ನೋಡಿ ಏನು ಮಾತಾಡಿದರೆ ಎಂದು ತಿಳಿದುಕೊಳ್ಳುವ ಕುತೂಹಲ. ಆದರೆ ನೀನು ಮಾತು ಮುಂದುವರಿಸಲಿಲ್ಲ. ನಾನೂ ಬಾಲ ಮುದುರಿಕೊಂಡು ಸುಮ್ಮನಾಗಿಬಿಟ್ಟೆ.

ಆಮೇಲೆ ನಾನು ರೈಲಿಗೆ ಹೊರಟು ನಿಂತಾಗ, ಕಳಿಸಿಕೊಡೋಕೆ ನೀನು ಗೇಟಿನವರೆಗೂ ಬಂದವಳು ನನ್ನ ಜೇಬಿಗೆ ಒಂದಿಷ್ಟು ನೋಟನ್ನು ತುರುಕಿ ‘ಈ ದುಡ್ಡಿಟ್ಟುಕೋ, ಅಲ್ಲಿ ಸಿಟಿಯಲ್ಲಿ ನಿನಗೆ ಖರ್ಚಿಗಿರುತ್ತೆ. ನಿನಗೆ ಬೇಕೆನಿಸಿದ್ದನ್ನು ಕೊಂಡುಕೊಂಡು ತಿನ್ನು, ಹಸ್ಕೊಂಡಿರಬೇಡ’ ಅಂದಾಗ ನನಗೆ ಹೇಗೆ ರಿಯಾಕ್ಟ್ ಮಾಡಬೇಕು ಅಂತ ಗೊತ್ತಾಗಲಿಲ್ಲ. ನನ್ನ ಕಣ್ಣೀರನ್ನ ತಡ್ಕೊಂಡು ತಲೆತಗ್ಗಿಸಿಕೊಂಡು ರೈಲ್ವೆ ಸ್ಟೇಷನ್ ಕಡೆ ಹೊರಟುಬಿಟ್ಟೆ.

ರೈಲಿನಲ್ಲಿ ಕೂತ್ಕೊಂಡು ಬರತಾ ಇದ್ದಾಗ ಮತ್ತೆ ನಿನ್ನ ನೆನಪು ಬಂತು ನಂಗೆ. ಹೊರಡೋವಾಗ ನೀನು ನನ್ನ ಜೇಬಿಗೆ ಮುದುರಿಟ್ಟಿದ್ದ ನೋಟನ್ನು ಕೈಗೆ ತೆಗೆದುಕೊಂಡು ನೋಡಿದೆ. ಅದರಲ್ಲಿ ಹತ್ತು ರೂಪಾಯಿಯ ನಾಲ್ಕು ನೋಟುಗಳಿದ್ದವು! ನನಗೆ ಆಶ್ಚರ್ಯವಾಯಿತು. ನೀನು ಈ ನಲವತ್ತು ರೂಪಾಯಿ ಮಾತ್ರ ಯಾಕಿಟ್ಟೆ ಅಂತ ತುಂಬಾ ತಲೆಕೆಡಿಸಿಕೊಂಡಿದ್ದೆ.

ಆಮೇಲೆ ಮುಂದೆ ಇನ್ನೊಂದು ಸಂದರ್ಭದಲ್ಲಿ ನೀನು ಆ ನಲವತ್ತು ರೂಪಾಯಿ ಯಾಕೆ ಕೊಟ್ಟೇ ಅಂತ ಹೇಳಿದ ಮಾತು ನನ್ನ ಕಿವಿಯಲ್ಲಿ ಇನ್ನೂ ಗುಂಯ್‌ಗುಡ್ತಾ ಇದೆ.

‘ಅದು ನಿನ್ನ ಮೊದಲ ಸಂಪಾದನೆ ಅಲ್ವಾ? ಅದಕ್ಕೆ ಐವತ್ತು ರೂಪಾಯಿ ಮುರಿಸಿ, ಹತ್ತು ರುಪಾಯಿನಲ್ಲಿ ದೇವರಿಗೆ ಹಣ್ಣು-ಕಾಯಿ ಮಾಡಿಸಿದೆ ಕಣೋ’

ಇಂಥ ಕ್ರಿಯೆಗಳೆಲ್ಲಾ ಅಮ್ಮಂದಿರಿಂದ ಮಾತ್ರ ಸಾಧ್ಯ.

ಅಮ್ಮಾ, ಈ ನಿನ್ನ ಆಶೀರ್ವಾದವೇ ನನಗೆ ದೊಡ್ಡ ಆಸ್ತಿ.

ಥ್ಯಾಂಕ್ಸ್ ಅಮ್ಮಾ!

ನಿಂಗೆ ಇನ್ನೊಂದು ವಿಚಾರ ಗೊತ್ತಾ? ನಿನ್ನೆ ‘ಮದರ್ಸ್ ಡೇ’ ಅಂತೆ. ನಾನು ನಿಂಗೆ ಫೋನ್ ಮಾಡಿ ವಿಶ್ ಮಾಡಿದ್ನಲ್ಲ. ಆಮೇಲೆ ಸುಮ್ಮನೇ ಫೇಸ್‌ಬುಕ್‌ನಲ್ಲಿ ನಿನ್ನ ಫೋಟೋ ಹಾಕಿ ಒಂದು ಸಣ್ಣ ಕಮೆಂಟ್ ಹಾಕಿದ್ದೆ. ಅದಕ್ಕೆ ಎಷ್ಟೊಂದು ಲೈಕ್ಸ್ ಬಂದಿದೆ ಗೊತ್ತಾ? ನೀನು ಬೆಂಗಳೂರಿಗೆ ಬಂದಾಗ ತೋರಿಸ್ತೀನಿ ಆಯಿತಾ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: