ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

ಸರ್ಕಾರಕ್ಕೂಂದು ಮನವಿ…

ಗೆ,
ಡಾ ಎನ್.ನಾಗಾಂಬಿಕಾ ದೇವಿ,
ಕಾರ್ಯದರ್ಶಿಗಳು,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಕರ್ನಾಟಕ ಸರ್ಕಾರ,
ಬೆಂಗಳೂರು

ಮಾನ್ಯರೆ,

ಕಳೆದ ಶನಿವಾರ ಮೈಸೂರಿನಲ್ಲಿ 2012 ಮತ್ತು 2013 ರ ಸಾಲಿನ ರಾಜ್ಯಪ್ರಶಸ್ತಿ ಸಮಾರಂಭವನ್ನು ಯಶಸ್ವಿಯಾಗಿ ನಡೆಸಿದ ನಿಮಗೆ ಅಭಿನಂದನೆಗಳು. ಹಾಗೆಯೇ ಈ ಸಮಾರಂಭದ ಕುರಿತು ನನ್ನ ಕೆಲವು ಅನಿಸಿಕೆಗಳನ್ನು ಹೇಳಲೇಬೇಕಾಗಿ ಬಂದದ್ದರಿಂದ ಈ ಪತ್ರ ಬರೆಯುತ್ತಿದ್ದೇನೆ.

ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ಅದರದ್ದೇ ಆದ ಘನತೆ, ಗೌರವ ಇದೆ. ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ಗೌರವಕ್ಕೆ ಪಾತ್ರರಾಗಬೇಕೆಂದು ಚಲನಚಿತ್ರದ ಕಲಾವಿದರು, ತಂತ್ರಜ್ಞರು ಆಸೆ ಪಡುತ್ತಾರೆ. ಅಂಥವರಲ್ಲಿ ನಾನೂ ಒಬ್ಬ. ಅದೃಷ್ಟವಶಾತ್ ಹಲವು ಬಾರಿ ಈ ಪ್ರಶಸ್ತಿಗೆ ಭಾಜನವಾಗಿರುವುದು ನನಗೆ ಹೆಮ್ಮೆಯ ಸಂಗತಿ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗುವುದಂತೂ ಸಂತೋಷದ ವಿಚಾರ.

ಆದರೆ ಈ ಸಲ ಮಾತ್ರ ಸಮಾರಂಭ ನಡೆದ ರೀತಿ ನನಗೆ ನಿರಾಶೆ ಉಂಟು ಮಾಡಿತು. ಸಾಮಾನ್ಯವಾಗಿ ಈ ಪ್ರಶಸ್ತಿಗಳನ್ನು ರಾಜ್ಯಪಾಲರು ಅಥವಾ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಹಾಗಾಗಿಯೇ ಈ ಸಮಾರಂಭಕ್ಕೆ ವಿಶೇಷ ಮನ್ನಣೆ. ಆದರೆ ಈ ವರ್ಷ ಆದದ್ದೇನು? ಪ್ರಶಸ್ತಿಗಳನ್ನು ವೇದಿಕೆಯಲ್ಲಿದ್ದ ಸಚಿವರುಗಳು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಕೊನೆಗೆ ಪಂಚಾಯಿತಿ ಸದಸ್ಯರೂ ಕೂಡ ಪ್ರದಾನ ಮಾಡಿದರು! ಇಲ್ಲಿ ನಾನು ಯಾರನ್ನೂ ದೊಡ್ಡವರು ಮತ್ತು ಸಣ್ಣವರು ಎಂದು ವಿಭಾಗೀಕರಿಸುತ್ತಿಲ್ಲ. ಸರ್ಕಾರದ ಪ್ರಶಸ್ತಿಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಿಂದ ಪಡೆಯಬೇಕು, ಅದರ ನೆನಪನ್ನು ಬಹುಕಾಲ ಉಳಿಸಿಕೊಳ್ಳಬೇಕು ಎಂದು ಪ್ರತಿಯೊಬ್ಬ ಪ್ರಶಸ್ತಿ ವಿಜೇತನೂ ಆಸೆ ಪಡುತ್ತಾನೆ.

ನಾನು ಒಂಬತ್ತು ಭಾರಿ ರಾಷ್ಟ್ರ ಚಲನಚಿತ್ರಪ್ರಶಸ್ತಿಯನ್ನು ನಾಲ್ವರು ರಾಷ್ಟ್ರಪತಿಗಳಿಂದ ಪಡೆದಿದ್ದೇನೆ. ಅಲ್ಲಿಯ ಶಿಸ್ತು, ಸಮಯಪಾಲನೆ, ಅಚ್ಚುಕಟ್ಟುತನ ಮತ್ತು ಘನತೆಯನ್ನು ಈ ಬಾರಿಯ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಣಲಾಗಲಿಲ್ಲವಲ್ಲ ಎಂದು ವಿಷಾದ ಪಡುತ್ತಿದ್ದೇನೆ.

ಪ್ರತಿವರ್ಷದ ಮೇ 3ನೇ ತಾರೀಖಿನಂದು ದೆಹಲಿಯ ವಿಜ್ಞಾನಭವನದಲ್ಲಿ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಜರುಗುವುದು ತಮಗೆ ತಿಳಿದೇ ಇದೆ. ಕಥಾಚಿತ್ರ ಮತ್ತು ಕಥೆಯೇತರ ಚಿತ್ರಗಳೆಂದು ಸುಮಾರು 100 ಕ್ಕೂ ಹೆಚ್ಚು ಪ್ರಶಸ್ತಿಗಳಿರುತ್ತವೆ. ಅಷ್ಟನ್ನೂ ಸ್ವತಃ ರಾಷ್ಟ್ರಪತಿಗಳೇ ಸುಮಾರು ಎರಡೂವರೆ ಗಂಟೆಗಳ ಕಾಲ ತಮ್ಮ ಕೈಯಾರ ಪ್ರತಿಯೊಬ್ಬರಿಗೂ ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಇದು ಒಂದು ಹೆಮ್ಮೆಯ ವಿಚಾರ. ಅಲ್ಲಿಯ ಪರಿಸ್ಥಿತಿ ಹಾಗಿರುವಾಗಿ ಇಲ್ಲಿ ಎರಡು ವರ್ಷದ್ದೂ ಸೇರಿ 59 ಪ್ರಶಸ್ತಿಗಳನ್ನು ವಿತರಿಸಲು ಈ ಗೊಂದಲವೇಕೆ?

ಸ್ವತಃ ಮುಖ್ಯಮಂತ್ರಿಗಳೇ ಸಮಾರಂಭದಲ್ಲಿ ಭಾಗವಹಿಸಿರುವಾಗ ಎಲ್ಲ ಪ್ರಶಸ್ತಿಗಳನ್ನು ಅವರೇ ಏಕೆ ಪ್ರದಾನ ಮಾಡಬಾರದು? ವೇದಿಕೆಯಲ್ಲಿರುವ, ಶಿಷ್ಟಾಚಾರಕ್ಕೆಂದು ಕರೆದ ಎಲ್ಲ ಸ್ಥಳೀಯ ಪ್ರಮುಖರೂ, ರಾಜಕಾರಣಿಗೂ ಪ್ರಶಸ್ತಿಯನ್ನು ಕೊಡುಮಾಡುವುದು ಎಷ್ಟರ ಮಟ್ಟಿಗೆ ಸಮಂಜಸ?

ಜೊತೆಗೆ, ಸಮಾರಂಭದಲ್ಲಿ ಅಷ್ಟೊಂದು ಹಾಡು, ನೃತ್ಯಗಳೇಕೆ? ಒಂದುವೇಳೆ, ಪ್ರೇಕ್ಷಕರ ಮನರಂಜನೆಗೂ ಅವಕಾಶ ಇರಲಿ ಎನ್ನುವುದಾದರೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಮತ್ತು ಚಲನಚಿತ್ರದ ಇತಿಹಾಸ ಮತ್ತು ಮಹತ್ವವನ್ನು ಸಾರುವ ಒಂದೆರಡು ಹಾಡು-ನೃತ್ಯ ಸಾಕಿತ್ತು. ಅನರ್ಥದ ಹಾಡು/ನೃತ್ಯಗಳ ಬದಲು ಹಿನ್ನೆಲೆ ಗಾಯನಕ್ಕೆ ಪ್ರಶಸ್ತಿ ಪಡೆದ ಗಾಯಕರಿಂದಲೇ ಅದೇ ಹಾಡನ್ನು ಹಾಡಿಸಬಹುದಿತ್ತಲ್ಲವೆ? ಜೊತೆಗೆ ಪ್ರಶಸ್ತಿ ಪ್ರಡೆದ ಚಿತ್ರದ ತುಣುಕಗಳನ್ನು ತೋರಿಸುವುದರೊಂದಿಗೆ, ಆ ಚಿತ್ರದ ಸಂಗೀತ, ಹಾಡು, ನೃತ್ಯವನ್ನು ಬಳಸಿಕೊಂಡಿದರೆ ಎಷ್ಟು ಚನ್ನಾಗಿರುತ್ತಿತ್ತು! ಮನರಂಜನೆ ಎಂಬ ಹೆಸರಿನಲ್ಲಿ ನಾವು ಅಭಿರುಚಿ ಕೆಡಿಸುವುದು ಬೇಡ ಎನ್ನುವುದು ನನ್ನ ಮನವಿ. ಈ ನೃತ್ಯಗಳನ್ನು ಕಡಿಮೆ ಮಾಡಿದರೆ ಸಾಕಷ್ಟು ಹಣ ಉಳಿತಾಯವಾಗುತ್ತದೆ. ಅದೇ ಹಣದಲ್ಲಿ ಪ್ರತಿವರ್ಷ ಎಲ್ಲಿ ಪ್ರಶಸ್ತಿ ಸಮಾರಂಭ ನಡೆಯುತ್ತದೆಯೋ ಅಲ್ಲೊಂದು ಚಿತ್ರಮಂದಿರವನ್ನು ಬಾಡಿಗೆಗೆ ಪಡೆದು, ಒಂದು ವಾರ ಮುಂಚೆಯೇ ಆ ವರ್ಷದ ಪ್ರಶಸ್ತಿ ವಿಜೇತ ಚಿತ್ರಗಳ ಪ್ರದರ್ಶನ ಏರ್ಪಡಿಸಬಹುದು! ಜೊತೆಗೆ ಸಮಾರಂಭದಲ್ಲಿ ಪ್ರಶಸ್ತಿ ಸಮಿತಿಯ ಅಧ್ಯಕ್ಷರು ಆ ವರ್ಷದ ಚಿತ್ರಗಳ ಕುರಿತು ಒಂದು ಸಣ್ಣ ವಿಶ್ಲೇಷಣೆ ಮಾಡಿದರೆ ಎಷ್ಟು ಅರ್ಥಪೂರ್ಣವಾಗಿರುತ್ತದೆ. ಈ ಹಿಂದೆ ಈ ಪದ್ಧತಿ ಇತ್ತು ಈ ಬಾರಿ ಯಾಕೋ ಚಾಲನೆಗೆ ಬರಲಿಲ್ಲ.

ಇನ್ನೊಂದು ವಿಚಾರ, ಈ ಬಾರಿ ಶ್ರೇಷ್ಠ ನಟ ದರ್ಶನ್ ಅವರು ಖಳನಟರಿಗೆ ಪ್ರಶಸ್ತಿ ಕೊಡುವುದರ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲೇ ಸರ್ಕಾರವೂ ಅದನ್ನು ಪರಿಗಣಿಸಿಬಿಟ್ಟಿತು ಕೂಡ. ತಮಗೇ ತಿಳಿದಿರುವಂತೆ ಸರ್ಕಾರದ ಪ್ರಶಸ್ತಿಗಳಲ್ಲಿ ಪೋಷಕ ನಟ ಹಾಗೂ ನಟಿ ಪ್ರಶಸ್ತಿ ಈಗಾಗಲೇ ಇವೆ. ಈ ವಿಭಾಗದಡಿಯಲ್ಲಿ ಖಳನಟರೂ ಕೂಡ ಬರುತ್ತಾರೆ. ಈ ಹಿಂದೆ ಅಂಥವರಿಗೆ ಪ್ರಶಸ್ತಿ ದೊರಕಿದ ಉದಾಹರಣೆಯೂ ಇವೆ. ಹೀಗಿರುವಾಗ ಅತ್ಯುತ್ತಮ ಖಳನಟ ಪ್ರಶಸ್ತಿ ಸೇರ್ಪಡೆ ಎಷ್ಟು ಸೂಕ್ತ? ನಾಳೆ ಅತ್ಯುತ್ತಮ ಹಾಸ್ಯ ನಟ-ನಟಿ, ಅತ್ಯುತ್ತಮ ಅತ್ತೆ-ಸೊಸೆ ಪಾತ್ರಗಳಿಗೂ ಪ್ರಶಸ್ತಿ ಕೊಡಬೇಕಾಗಿ ಬಂದೀತು!

ತಾವು ಕನ್ನಡ ಸಂಸ್ಕೃತಿ, ಕಲೆ ಮತ್ತು ಪರಂಪರೆ ಬಗ್ಗೆ ಕಾಳಜಿ ಉಳ್ಳವರು ಮತ್ತು ಅತ್ಯುತ್ತಮ ಆಡಳಿತಗಾರರು. ಇನ್ನು ಮುಂದಿನ ವರ್ಷಗಳಲ್ಲಾದರೂ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗಮನಾರ್ಹ ಕಾರ್ಯಕ್ರಮವಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುತ್ತೀರಿ ಎಂದು ನಂಬುತ್ತೇನೆ. ಜೊತೆಗೆ, ಈ ಸಮಾರಂಭಕ್ಕೆ ಒಂದು ಖಚಿತ ದಿನಾಂಕವನ್ನು ಕೂಡ ನಿಗದಿ ಮಾಡಬಹುದು. ರಾಷ್ಟ್ರಮಟ್ಟದಲ್ಲಿರುವಂತೆ ನಮ್ಮಲ್ಲಿ ಮಾರ್ಚ್ ಮೂರನೇ ತಾರೀಖನ್ನು ಪ್ರಶಸ್ತಿ ಸಮಾರಂಭಕ್ಕೆ ಎಂದು ನಿಗದಿ ಮಾಡಬಹುದು. ಅದು ಕನ್ನಡದ ವಾಕ್ಚಿತ್ರ ಹುಟ್ಟಿದ ದಿನ ಎಂದು ತಮಗೆ ತಿಳಿದೇ ಇದೆ.

ನನ್ನ ಕಳಕಳಿಯ ವಿಚಾರಗಳನ್ನು ಅನ್ಯಥಾ ಭಾವಿಸದೆ, ಮನ್ನಿಸುತ್ತೀರಿ ಎಂದು ನಿರೀಕ್ಷಿಸುತ್ತೇನೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,
ಪಿ.ಶೇಷಾದ್ರಿ

(ಈ ಪತ್ರದ ಪ್ರತಿಯನ್ನು ನಿರ್ದೇಶಕರು, ವಾರ್ತಾ ಇಲಾಖೆಗೆ ಕೂಡ ಕಳುಹಿಸಲಾಗಿದೆ)

1 ಟಿಪ್ಪಣಿ

  1. Suresha D

    nnನಿಮ್ಮ ಅಭಿಪ್ರಾಯ ಸರಿ ಇದೆ ಆದರೆ ಸಿನಿಮಾದ ಪ್ರಮುಖ ತಾಂತ್ರಿಕ ವರ್ಗವನ್ನು ಪರಿಗಣಿಸುವ ರೀತಿ ಒಂದು ಚಿತ್ರದಲ್ಲಿನ ಪ್ರಮುಖ ಪಾತ್ರಗಳಾದ ಹಾಸ್ಯ ನಟ, ಖಳ ನಟ ಮತ್ತು ಪೋಷಕ ನಟ ಪ್ರಶಸ್ತಿ ನೀಡುವುದರಲ್ಲಿ ತಪ್ಪಿಲ್ಲ ಅನ್ನುವುದು ನನ್ನ ಭಾವನೆ ಏಕೆಂದರೆ ಒಂದು ಚಿತ್ರಕ್ಕೆ ತಾಂತ್ರಿಕ ವರ್ಗ ಹೇಗೆ ಮುಖ್ಯನು ಹಾಗೇ ಮೇಲಿನ ನಟನೆಯ ವರ್ಗಗಳು ಮುಖ್ಯ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: