ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

ಒಂದು ಪ್ರಶ್ನೆ ಪತ್ರಿಕೆ!

1. ‘ಡಿಸೆಂಬರ್ 1’ ರ ಸ್ಥೂಲ ಕಥಾ ನಕ್ಷೆ?

ಅದೊಂದು ಉತ್ತರಕರ್ನಾಟಕದ ಒಂದು ಪುಟ್ಟ ಹಳ್ಳಿ. ಅಲ್ಲಿ ರೊಟ್ಟಿ ಮಾರಿ ಜೀವನ ಸಾಗಿಸುತ್ತಿರುವ ದೇವಕ್ಕನದ್ದು ಒಂದು ಪುಟ್ಟ ಕುಟುಂಬ. ಗಂಡ ಮಾದೇವಪ್ಪ ಟ್ರಕ್ ಓಡಿಸುತ್ತಾ ಸೀಮೆ ಸುತ್ತುತ್ತಿದ್ದವನು, ಅಪಘಾತದಲ್ಲಿ ಕಾಲು ಊನ ಮಾಡಿಕೊಂಡು ಈಗ ಹಿಟ್ಟಿನ ಗಿರಣಿಯಲ್ಲಿ ಚಿಕ್ಕಾಸಿಗೆ ದುಡಿಯುತ್ತಿದ್ದಾನೆ. ಗ್ರಾಮವಾಸ್ತವ್ಯದ ಹಿನ್ನೆಲೆಯಲ್ಲಿ ಡಿಸೆಂಬರ್ ಒಂದರಂದು ರಾಜ್ಯದ ಮುಖ್ಯಮಂತ್ರಿಗಳು ಆ ಮನೆಯಲ್ಲಿ ತಂಗುವ ನಿರ್ಧಾರ ಮಾಡುತ್ತಾರೆ. ದಿಢೀರನೆ ಮಾದೇವಪ್ಪ ದಂಪತಿಗಳಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ಬರುತ್ತದೆ. ದೇವಕ್ಕನ ರೊಟ್ಟಿಗೆ ಡಿಮ್ಯಾಂಡ್ ಸೃಷ್ಟಿಯಾಗುತ್ತದೆ. ಮುಖ್ಯಮಂತ್ರಿಗಳ ಹೆಸರಿನಲ್ಲಿ ಕರೆಂಟು, ಟೀವಿ, ಫ್ರಿಜ್ಜು, ಸೋಫಾ ಬಂದು ಕೂರುತ್ತವೆ. ಆದರೆ ಸಿ‌ಎಂ ಉಳಿಯಲು ದೇವಕ್ಕನ ಮನೆಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಬಡತನವನ್ನು ಮೀರಿದ ಕಾರಣಗಳಿರುತ್ತವೆ. ಯಾವಾಗಲೂ ಬ್ರೇಕಿಂಗ್ ನ್ಯೂಸ್‍ಗೆ ಹಸಿದಿರುವ ಮಾಧ್ಯಮದ ಪ್ರತಿನಿಧಿಯೊಬ್ಬ ಆ ಕಾರಣವನ್ನು ಪತ್ತೆ ಮಾಡುತ್ತಾನೆ. ಸಿ‌ಎಂ ಬಂದು ಹೋದಮೇಲೆ ಅದು ಮಾಧ್ಯಮಗಳಲ್ಲಿ ರಟ್ಟಾದಾಗ ಇಡೀ ಹಳ್ಳಿ ಬೆಚ್ಚಿಬೀಳುತ್ತದೆ. ಈ ಕುಟುಂಬದ ಬದುಕು ಛಿದ್ರವಾಗುತ್ತದೆ!
Dec-1

2. ‘ಡಿಸೆಂಬರ್ 1’ ಕೃತಿಯಾಗಿ ರೂಪು ತಳೆದದ್ದು ಹೇಗೆ? (ಕಥೆ ಹೊಳೆದ ಕಥಾ ಸಮಯ, ಚಿತ್ರದ ಮೇಕಿಂಗ್ ಗಾಗಿ ಪಟ್ಟ ಕಷ್ಟ ಇತ್ಯಾದಿ)

ಪತ್ರಿಕೆಯೊಂದರಲ್ಲಿ ಬಂದ ಸಣ್ಣ ವರದಿಯೊಂದು ಈ ಕಥೆ ಹೊಳೆಯಲು ಕಾರಣವಾಯಿತು. ಸುಮಾರು ಎಂಟು ತಿಂಗಳು ಈ ಸುದ್ದಿಯ ಬೆನ್ನು ಹಿಡಿದು ಕರ್ನಾಟಕದ ಹಲವು ಹಳ್ಳಿಗಳನ್ನು ಸುತ್ತಿದೆ. ಮುಖ್ಯಮಂತ್ರಿಗಳು ಗ್ರಾಮವಾಸ್ತ್ಯವ್ಯ ಹೂಡಿದ್ದ ಮನೆಗಳ ಕದ ತಟ್ಟಿಬಂದೆ. ನಿಧಾನವಾಗಿ ನನ್ನ ಚಿತ್ರದ ಸ್ಪಷ್ಟ ರೂಪ ಸಿಕ್ಕಿತು. ಆಮೇಲೆ ಇದರ ಆವರ ಕುರಿತು ಚಿಂತಿಸಿದೆ. ನನ್ನ ಹಿಂದಿನ ಚಿತ್ರಗಳಲ್ಲಿ ಇಲ್ಲಿಯವರೆಗೆ ಬರದೇ ಇದ್ದ ಉತ್ತರ ಕರ್ನಾಟಕದ ಸೀಮೆ, ಭಾಷಾ ಸೊಗಡನ್ನು ಯಥಾವತ್ತಾಗಿ ಹಿಡಿದಡಲು ನಿರ್ಧರಿಸಿದೆ. ಹಳ್ಳಿ ಹುಡುಕುವುದೇ ತ್ರಾಸವಾಯಿತು. ಸಿಮೆಂಟ್ ಕಟ್ಟಡವಿಲ್ಲದ, ಸೀಮೆ ಮನೆಗಳೇ ಇರುವ ಒಂದು ಬೀದಿ ನನಗೆ ಬೇಕಿತ್ತು. ಇದಕ್ಕಾಗಿ ಎಷ್ಟು ಚಪ್ಪಲಿ ಸವೆಸಿದೆನೋ! ಕೊನೆಗೆ ಅದನ್ನು ಹುಬ್ಬಳ್ಳಿ ಬಳಿಯ ಶಿರಗುಪ್ಪಿಯಲ್ಲಿ ಕಂಡೆ. ನಂತರದ್ದು ಪಾತ್ರವರ್ಗ. ಇದರಲ್ಲಿ ಉತ್ತರಕರ್ನಾಟಕದ ಸ್ಥಳೀಯ ಕಲಾವಿದರನ್ನೇ ಬಳಸಬೇಕೆಂದು ನಿರ್ಧರಿಸಿದೆ. ಸುಮಾರು ಒಂದೂವರೆ ಸಾವಿರ ಜನರ ಆಡಿಷನ್ ಮಾಡಿ, ಅದರಲ್ಲಿ ಸುಮಾರು ನೂರಿಪ್ಪತ್ತು ಜನರನ್ನು ಆಯ್ಕೆ ಮಾಡಿಕೊಂಡೆ. ಅವರೆಲ್ಲರೂ ಈ ಚಿತ್ರದಲ್ಲಿದ್ದಾರೆ. ಇದರಲ್ಲಿ ಕೇವಲ ಮೂರು ಮಂದಿ ಮಾತ್ರ (ನಿವೇದಿತ, ದತ್ತಣ್ಣ, ಶಶಿ) ಬೆಂಗಳೂರಿನವರು.

3. ‘ಡಿಸೆಂಬರ್ 1’ ಚಿತ್ರವನ್ನು ಜನರು ಇಷ್ಟ ಪಟ್ಟು ನೋಡಲು 5 ಅತಿ ಪ್ರಮುಖ ಕಾರಣಗಳು?

ಒಂದು ಮುಖ್ಯವಾಹಿನಿ ಚಿತ್ರದಂತೆ ಇದನ್ನು ನೀವು ನೋಡಲೇ ಬೇಕು, ನೋಡದಿದ್ದರೆ ಮಿಸ್ ಮಾಡಿಕೊಳ್ಳುತ್ತೀರಿ ಎಂದೆಲ್ಲ ಹೇಳುವುದು ನನಗೆ ಕಷ್ಟ. ಒಂದು ಒಳ್ಳೆಯ ಕೃತಿಯನ್ನು ಓದಿದಾಗ ಸಿಗುವ ಅನುಭವ, ಒಂದು ಒಳ್ಳೇ ಸಂಗೀತ ಕೇಳಿದಾಗ ಸಿಗುವ ಆನುಭೂತಿ ಈ ಚಿತ್ರ ನೋಡಿದಾಗಲೂ ಆಗಬಹುದು ಎಂದು ಮಾತ್ರ ಹೇಳಬಲ್ಲೆ. ಹಾಂ! ಇನ್ನೊಂದು ಮಾತನ್ನು ಹೇಳಲೇಬೇಕು. ಒಂದು ಪ್ರಶಸ್ತಿಯೋ, ಪುರಸ್ಕಾರವೋ ಬಂದ ತಕ್ಷಣ ಅದೊಂದು ಆರ್ಟ್ ಫಿಲಂ, ಅವಾರ್ಡ್ ಫಿಲಂ ಎಂದು ಮೂಗು ಮುರಿಯುವವರು ಮೊದಲು ಇದನ್ನು ನೋಡಿ ನಂತರ ನಿರ್ಧರಿಸಲಿ.

4. ‘ರಾಜಕೀಯ ಚಿತ್ರ’ ಮಾಡುವಾಗ ಸಂಕಟಗಳಿರುತ್ತವೆಯೆ? ಅಥವಾ ಈ ಚಿತ್ರ ಮಾಡುವಾಗ `ಧರ್ಮ ಸಂಕಟ’ ಏನಾದರೂ ಇತ್ತೆ …?

ಡಿಸೆಂಬರ-1 ಅನ್ನು ನಾನು ರಾಜಕೀಯ ಚಿತ್ರ ಎಂದು ಕರೆಯುವುದಿಲ್ಲ. ಬಹುಶಃ ಒಂದು ರಾಜಕೀಯದ ಹಿನ್ನೆಲೆಯಲ್ಲಿ ಬಂದಿರುವ ಚಿತ್ರ ಎನ್ನಬಹುದೇನೋ. ಮುಖ್ಯ ಧರ್ಮಸಂಕಟ ಎಂದರೆ, ಗ್ರಾಮವಾಸ್ತವ್ಯದ ಹೆಸರು ಕೇಳಿದ ತಕ್ಷಣ ಇದನ್ನು ಮತ್ತಾವುದಕ್ಕೋ ತಳಕು ಹಾಕುತ್ತಾರಲ್ಲ ಅದು ಸ್ವಲ ಕಷ್ಟ.

5. ‘ಭಾರತ್ ಸ್ಟೋರ್ಸ್’ ಚಿತ್ರವನ್ನು ಪಕ್ಷವೊಂದು ’ಪ್ರಮೋಟ್’ ಮಾಡಿದಂತೆ, ’ಡಿಸೆಂಬರ್ 1’ ಮತ್ತೊಂದು ಪಕ್ಷದ ಚಿತ್ರವಾದೀತೇ?

ನಿಜವಾಗಿಯೂ ಹೇಳ್ತೇನೆ, `ಭಾರತ್ ಸ್ಟೋರ್ಸ್’ ನ ಬೆಳವಣಿಗೆ ನನಗೆ ಅನಿರೀಕ್ಷಿತ. ಯಾರಿಗೆ ಯಾವ ಚಿತ್ರದಲ್ಲಿ ಏನು ಕಾಣಿಸುತ್ತದೆಯೋ! ಹೇಗೋ ಒಟ್ಟಿನಲ್ಲಿ ಚಿತ್ರಗಳು ಹೆಚ್ಚು ಜನರನ್ನು ತಲಪಿದರೆ ಅದಕ್ಕಿಂತ ಬೇರೆ ಸಂತೋಷ ಇನ್ನೇನಿದೆ? ಒಟ್ಟಾರೆ ನನ್ನ ಚಿತ್ರಗಳ ಉದ್ದೇಶವಂತೂ ರಾಜಕೀಯ ಪ್ರೇರಿತವಲ್ಲ. ನಿಮಗೆ ಗೊತ್ತೆ? `ಭಾರತ್ ಸ್ಟೋರ್ಸ್’ ಹಿಂದಿಯಲ್ಲಿ ಡಬ್ ಆಗುವ ಮಾತುಕತೆ ನಡೆಯುತ್ತಿದೆ!

6.ಈ ಚಿತ್ರದ ದತ್ತಣ್ಣನವರ ಪಾತ್ರ ಮತ್ತು ಅವರ ಅಬಿನಯದ ಬಗ್ಗೆ ಹೇಳುವಿರಾ?

ದತ್ತಣ್ಣನದು ಇದರಲ್ಲಿ ಮುಖ್ಯಮಂತ್ರಿಯ ಪಾತ್ರ. ಅವರು ಈ ಹಿಂದೆ ಬೇರೆ ಚಿತ್ರಗಳಲ್ಲಿ ಮಂತ್ರಿ, ಮುಖ್ಯಮಂತ್ರಿ, ರಾಜ್ಯಪಾಲರಾಗಿಯೂ ಅಭಿನಯಿಸಿದ್ದರಂತೆ. ಅವುಗಳಲ್ಲಿ ಒಂದೋ ಕೆಟ್ಟವ ಇಲ್ಲವೇ ತೀರ ಒಳ್ಳೆಯವವ. ಆದರೆ ಇಲ್ಲಿ ಅವರದ್ದು ಬ್ಲಾಕ್ ಅಂಡ್ ವೈಟ್ ಎರಡೂ ಶೇಡ್ ಇರುವ ಪಾತ್ರ. ಕೇವಲ ಚಿತ್ರ ಹತ್ತು-ಹದಿನೈದು ನಿಮಿಷ ಬಂದು ಹೋಗುವ ಪುಟ್ಟ ಪಾತ್ರವಾದರೂ ಪರಿಣಾಮಕಾರಿಯಾಗಿದೆ.

7. ನಿವೇದಿತಾರಿಗೆ ಈ ಚಿತ್ರ ಎಷ್ಟು ಪ್ರಮುಖವಾಗಲಿದೆ?

ಆಕೆಯನ್ನು ನಾನು ಕನ್ನಡದ ಸ್ಮಿತಾಪಾಟೀಲ್ ಎಂದು ಕರೆಯುತ್ತೇನೆ. ಶ್ರದ್ಧೆಯಿಂದ ತನ್ನ ಕೆಲಸ ನಿರ್ವಹಿಸಿದ್ದಾಳೆ. ಒಳ್ಳೇ ಭವಿಷ್ಯವಿದೆ. ಕಲಾತ್ಮಕ ಚಿತ್ರಗಳ ಕ್ವೀನ್ ಆದರೂ ಆಶ್ಚರ್ಯವಿಲ್ಲ.

8. ಚಿತ್ರದ youtube ಲಿಂಕ್ ನೋಡಿದಾಗ ಛಾಯಾಗ್ರಹಣ ಸೊಗಸಾಗಿದೆ ಎನ್ನಿಸಿತು, ಛಾಯಾಗ್ರಹಕರ ಕುರಿತು?

ಅಶೋಕ್ ವಿ.ರಾಮನ್ ಅವರಿಗೆ ನಾನು ಈ ಚಿತ್ರದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೆ. ಅವರು ಅದನ್ನು ಸದ್ಬಳಕೆ ಮಾಡಿಕೊಂಡಿರುವುದನ್ನು ನೀವೇ ಕಾಣಬಲ್ಲಿರಿ. ತುಂಬ ಆಸಕ್ತಿಯಿಂದ ಕೆಲಸ ಮಾಡಿದ್ದಾರೆ. ಎಸ್.ರಾಮಚಂದ್ರ, ಎಚ್‍ಎಂ, ಭಾಸ್ಕರ್ ಇವರ ಸಾಲಿನಲ್ಲಿ ನಿಲ್ಲುವ ಪ್ರತಿಭೆಯಿರುವ ವ್ಯಕ್ತಿ. ಚಿತ್ರೀಕರಣ ಮುಗಿದ ಮೇಲೆ ನನ್ನ ಕೆಲಸ ಮುಗಿಯಿತು ಎನ್ನುವ ಮನೋಭಾವದವನಲ್ಲ. ಡಬ್ಬಿಂಗ್, ರೀರೆಕಾರ್ಡಿಂಗ್, ಮಿಕ್ಸಿಂಗ್ ಎಲ್ಲ ಹಂತಗಳಲ್ಲೂ ನಮ್ಮೊಂದಿಗೆ ಕೂತಿದ್ದಾರೆ, ಚಿತ್ರವನ್ನು ರೂಪಿಸುವುದರಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ. ಇದು ನನಗೆ ಅವರಲ್ಲಿ ಇಷ್ಟವಾದ ಸ್ವಭಾವ.

9. ರಾಜಕಾರಣವನ್ನು ಸೂಕ್ಷ್ಮವಾಗಿ ಗ್ರಹಿಸುವವರಿಗೆ ಮಾತ್ರ ಹೊಳೆವ ಸಂಗತಿ – ’ಡಿಸೆಂಬರ್ 1′ … ನಿಮ್ಮ ಜೀವನದಲ್ಲಿ ನೀವೆಷ್ಟು ಈ ಕ್ಷೇತ್ರದ ಕುರಿತು ಆಸಕ್ತಿ ವಹಿಸುತ್ತೀರಿ? ಚುನಾವಣೆಯ ಈ ಘಟ್ಟದಲ್ಲಿ ಇಂದಿನ ರಾಜಕೀಯ ನಿಮ್ಮ ಮುಂದಿನ ಕಥಾ ವಸ್ತು ಆದರೂ ಆಗಬಹುದಲ್ಲ!

ನಿಜವಾಗಿಯೂ ನನಗೆ ರಾಜಕೀಯ ಕೊಂಚವೂ ಇಷ್ಟವಿಲ್ಲದ ಕ್ಷೇತ್ರ. ಈ ಚುನಾವಣಾ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಇವರ ವಿಚಿತ್ರ ದೊಂಬರಾಟವನ್ನು ಕಂಡರೆ ಅಚ್ಚರಿ ಹುಟ್ಟುತ್ತದೆ. ಇವರ ತಂತ್ರ-ಪ್ರತಿತಂತ್ರ ಯಾವ ಚಿತ್ರಕ್ಕಾದರೂ ಸೊಗಸಾದ ವಸ್ತುವಾಗಬಹುದು. ಆದರೆ ನಾನು ಇದನ್ನು ಹೊರಗಿನಿಂದ ಮಾತ್ರ ಕಂಡಿದ್ದೇನೆ. ಒಳಹೊಕ್ಕರೆ ಇನ್ನೂ ಏನೇನಿದೆಯೋ?

10.ನೀವು ಇಷ್ಟಪಡುವ 5 ಭಾರತೀಯ ನಿರ್ದೇಶಕರು?

ಇದನ್ನು ಐದಕ್ಕೇ ಸೀಮಿತಗೊಳಿಸುವುದು ಕಷ್ಟ. ಒಂದೊಂದು ಚಿತ್ರದ ನಿರ್ದೇಶಕ ಒಂದೊಂದು ಕಾರಣಕ್ಕೆ ಇಷ್ಟವಾಗುತ್ತಾನೆ. ಅದೇ ನಿರ್ದೇಶಕನ ಬೇರೆ ಚಿತ್ರ ಇಷ್ಟವಾಗದೇ ಇರುವುದೂ ಉಂಟು.

11. ಇಂದಿನ ಸಿನೆಮಾ ಪತ್ರಿಕೋದ್ಯಮದ ಕುರಿತು ನಿಮ್ಮ ಅಭಿಪ್ರಾಯವೇನು?

ಏನು ಹೇಳಲಿ? ಸಾಹಿತ್ಯ ಕ್ಷೇತ್ರದಲ್ಲಿ ಕಾಣಿಸುವ ವಸ್ತುನಿಷ್ಠ ವಿಮರ್ಶೆ, ಚರ್ಚೆಗಳು ಚಲನಚಿತ್ರಗಳ ಕುರಿತು ಆಗುತ್ತಿಲ್ಲ ಎಂಬ ವಿಷಾದವಿದೆ. ಸಿನಿಮಾ ಎಂದರೆ ಬರೀ ಮನರಂಜನೆ ಕೊಡುವ ಕೃತಿ ಎಂಬಂತೆ ಭಾವಿಸುತ್ತಾರೆ. ಸಿನಿಮಾ ಅಷ್ಟೇ ಅಲ್ಲ, ಅಲ್ಲವೆ?

12. ನೀವು ಸೆಲೆಬ್ರಿಟಿಯಾಗಿ ಎದುರಿಸುವ ಮುಜುಗರಗಳೇನು?

ಹಾಗೇನಿಲ್ಲ… ನಮಗ್ಯಾವ ಸೀಮೆ ಫೇಸ್ ವ್ಯಾಲ್ಯೂ ಇದೆ?

13. ನಿಮಗೆ ಅತಿ ಇಷ್ಟವಾದ ಜಗತ್ತಿನ 5 ಚಿತ್ರಗಳು?

ಸಿಟಿ ಲೈಟ್ಸ್ (ಚಾಪ್ಲಿನ್), ಬ್ಯಾಟ್ಲ್‍ಶಿಪ್ ಪೊಟಮ್‍ಕಿನ್ (ಐಸೆನ್‍ಸ್ಟೈನ್), ಬೈಸಿಕಲ್ ಥೀವ್ಸ್ (ಡಿಸಿಕ), ದಿ ಬಡ್ರ್ಸ್ (ಹಿಚ್‍ಕಾಕ್), ರೊಷೊಮನ್ (ಕುರಸೋವ)

14. ಚಿತ್ರಕಥೆ ಮಾಡುವಾಗ ಒಬ್ಬ ಹೊಸ ಕಥೆಗಾರನಿಗೆ ನೀವು ಕೊಡುವ ಟಿಪ್ಸ್ ಏನು? ಒಂದು ಸ್ಕ್ರಿಪ್ಟ್ ಬರಯುವಾಗ ನಿಮ್ಮ ಸಿದ್ಧತೆ ಹೇಗಿರುತ್ತದೆ?

ಮೊದಲು ನಾನು ಚಿತ್ರಕಥೆಯ ಸ್ಥೂಲ ರೂಪದ ನಕ್ಷೆಯನ್ನು ಮನಸ್ಸಿನಲ್ಲೇ ಹೆಣಿಗೆ ಮಾಡಿಕೊಳ್ಳುತ್ತೇನೆ. ಬೆಳಗ್ಗೆ ವಾಕ್ ಮಾಡುವಾಗ, ಸ್ನಾನ ಮಾಡುವಾಗ, ಡ್ರೈವ್ ಮಾಡುವಾಗ ಹೀಗೆ ಒಬ್ಬನೇ ಇರುವಾಗ ಸುಮ್ಮನೇ ಅದರ ಕುರಿತೇ ಧ್ಯಾನಿಸುತ್ತೇನೆ. ಆಗಾಗ ಹೊಳೆದದ್ದನ್ನೆಲ್ಲ ನೋಟ್ಸ್ ಮಾಡಿಕೊಳ್ಳುತ್ತೇನೆ. ನನ್ನ ಸ್ನೇಹಿತರ ವಲಯಕ್ಕೆ ಅದನ್ನು ನಿರೂಪಿಸುತ್ತೇನೆ. ಆಗ ಹೊಸ ಹೊಸ ವಿಚಾರಗಳು ತಾನಾಗೇ ಹೊಳೆಯುತ್ತವೆ. ಅವನ್ನು ಒಟ್ಟುಗೂಡಿಸಿಕೊಂಡು ಮೊದಲು ಸಿಂಗಲ್‍ಲೈನ್ (ಚಿತ್ರಕಥಾ ಸಾರಾಂಶ) ಬರೆಯುತ್ತೇನೆ. ಆ ವಸ್ತುವಿಗೆ ಶಕ್ತಿಯಿದ್ದರೆ ಅದೇ ತನ್ನಷ್ಟಕ್ಕೆ ತಾನೇ ಅರಳಿಕೊಳ್ಳುತ್ತಾ ಹೋಗುತ್ತದೆ. ಮಧ್ಯೆ ತೊಡಕು ಉಂಟಾದರೆ ಅದನ್ನು ಸ್ವಲ್ಪ ಕಾಲ ಮುಚ್ಚಿಟ್ಟುಬಿಡುತ್ತೇನೆ. ಒಮ್ಮೆ ಸಿಂಗಲ್ ಲೈನ್ ಆಗಿಬಿಟ್ಟರೆ ಮಿಕ್ಕದ್ದು ನನಗೆ ಸುಲಭ.

15. “ಮುನ್ನುಡಿ’ಯ ಕಾಲದಿಂದ ’ಡಿಸೆಂಬರ್ 1′ ರ ವರೆಗಿನ ನಿಮ್ಮ ಪಯಣದಲ್ಲಿ ನಿಮಗೆ ಸಿಕ್ಕ ಅತಿ ದೊಡ್ಡ ಕಾಂಪ್ಲಿಮೆಂಟ್ ಏನು?

ನನ್ನ `ಬೇರು’ಚಿತ್ರ ಕರ್ನಾಟಕದಲ್ಲಿ ಆರನೇ ತರಗತಿಗೆ ಪಠ್ಯವಾಗಿರುವುದು. ಮತ್ತು ಕೆ‌ಎ‌ಎಸ್ ಓದುವವರು ಮೈಸೂರಿನಲ್ಲಿರುವ ಅಡ್‍ಮಿಸ್ಟ್ರೇಷನ್ ಟ್ರೈನಿಂಗ್ ಇನ್ಸ್‍ಟಿಟ್ಯೂಟ್‍ನಲ್ಲಿ ಮೂರು ತಿಂಗಳ ಟ್ರೈನಿಂಗ್ ಪಡೆದುಕೊಳ್ಳುತ್ತಾರೆ. ಅಲ್ಲೂ ಇವರಿಗೆ `ಬೇರು’ ಚಿತ್ರವನ್ನು ಬೋಧಿಸುತ್ತಾರೆ!

16. ‘ಡಿಸೆಂಬರ್ 1’ ನಿಮಗೆ ರಾಷ್ಟ್ರಪ್ರಶಸ್ತಿ ತರಲಿದೆ ಎಂಬಷ್ಟು ಒಳ್ಳೆಯ ಅಭಿಪ್ರಾಯವಿದೆ, ಈ ಚಿತ್ರ ನಿಜವಾಗಿಯೂ ಆ ಚಮತ್ಕಾರ ತೋರಲಿದೆಯೇ? ನಿಮ್ಮ ಹಿಂದಿನ ಎಲ್ಲ ಸಿನಿಮಾಗಳಿಗೆ ಹೋಲಿಸಿದಲ್ಲಿ ಇದು ಹೇಗೆ ಹೊಸತು ಅಥವಾ ವಿಭಿನ್ನ?

ನನ್ನ ಒಂದೊಂದು ಚಿತ್ರ ಒಂದೊಂದು ಕಾರಣಕ್ಕೆ ವಿಭಿನ್ನವಾಗಿಯೇ ಇದೆ ಎಂದು ಭಾವಿಸುತ್ತೇನೆ. `ಡಿಸೆಂಬರ್-1’ ನ್ನು ಅವೆಲ್ಲವುಕ್ಕಿಂತ ಚನ್ನಾಗಿದೆ ಎಂದು ನೋಡಿದವರು ಹೇಳುತ್ತಾರೆ. ಇದೆಲ್ಲ ನಾನು ಮಾಡಿದೆ ಎನ್ನುವುದಕ್ಕಿಂತ ಅದು ಆಗಿದೆ ಎಂದು ಮಾತ್ರ ಹೇಳಬಲ್ಲೆ. ಇನ್ನು ರಾಷ್ಟ್ರಪ್ರಶಸ್ತಿ ಬರುತ್ತದೋ ಇಲ್ಲವೋ ಅದನ್ನು ಈಗಲೇ ಹೇಳುವುದು ಕಷ್ಟ. ಈ ಸಲ ಭಾರತದ ಎಲ್ಲ ಭಾಗಗಳಿಂದ ಸೇರಿ ಒಟ್ಟು ಮುನ್ನೂರ ಹತ್ತು ಚಿತ್ರಗಳು ಸ್ಪರ್ಧೆಯಲ್ಲಿವೆ ಎಂದು ಸರ್ಕಾರ ಹೇಳಿದೆ. ಇದೊಂದು ದಾಖಲೆ! ಹದಿನಾಲ್ಕು ವರ್ಷಗಳ ಹಿಂದೆ ನನ್ನ ಮೊದಲ ಚಿತ್ರ `ಮುನ್ನುಡಿ’ ಸ್ಪರ್ಧೆಯಲ್ಲಿದ್ದಾಗ ಕಣದಲ್ಲಿದ್ದದ್ದು ಸುಮಾರು ಎಪ್ಪತ್ತು ಚಿತ್ರಗಳು. ಈ ಸಲ ಏನಾಗುತ್ತದೆಯೋ ಗೊತ್ತಿಲ್ಲ, ಮರಕ್ಕಿಂತ ಮರ ದೊಡ್ಡದಿರುತ್ತದೆ ಅಲ್ಲವೇ?

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಹೊಸ ಅಲೆ/ಪ್ರಯೋಗಶೀಲತೆ ಈಗ ಹೇಗಿದೆ?

ಹಿಂದೆ ನಮ್ಮ ದೇಶದಲ್ಲಿ `ಹೊಸ ಅಲೆ’ ಯ ಚಿತ್ರಗಳಲ್ಲಿ ಮೊದಲ ಸ್ಥಾನ ಬೆಂಗಾಲಿ ಚಿತ್ರಗಳಿಗೆ, ಎರಡನೆಯದು ಕೇರಳಕ್ಕೆ ಮೂರನೆಯದು ಕರ್ನಾಟಕಕ್ಕೆ ಇತ್ತು. ಈಗ ನಾವು ಆ ಸ್ಥಾನವನ್ನು ಮರಾಠಿಗೆ ಮತ್ತು ಇತರೆ ಭಾಷೆಗಳಿಗೆ ಬಿಟ್ಟುಕೊಟ್ಟಿದ್ದೇವೆ. ನಮ್ಮಲ್ಲಿ ಪ್ರಯೋಗಶೀಲತೆ ಕಡಿಮೆಯಾಗಿದೆ. ಬೇರೆ ಭಾಷೆಗಳಲ್ಲಿ ಬಂದಷ್ಟು ಹೊಸಬರು ಇಲ್ಲಿ ಬರುತ್ತಿಲ್ಲ. ಬಂದರೂ ಅವರೂ ಏಕೋ ವಿಭಿನ್ನವಾಗಿ ಯೋಚಿಸಿ ಚಿತ್ರ ಮಾಡುತ್ತಿಲ್ಲ. ಕೈಯಲ್ಲಿ 15-20 ಲಕ್ಷ ಇಟ್ಟುಕೊಂಡು ಹೊರಡುತ್ತಾರೆ. ಅಂದುಕೊಂಡದ್ದನ್ನು ತೆರೆಯ ಮೇಲೆ ತರಲಾರದೆ ಅವರ ಚಿತ್ರಗಳು ಸೊರಗುತ್ತವೆ. ಬೇರೆ ಭಾಷೆಗಳಲ್ಲಿ ನಮ್ಮ ಧಾಟಿಯ ಚಿತ್ರಗಳ ಬಜೆಟ್ ಕನಿಷ್ಠ ಒಂದು ಕೋಟಿ ಇರುತ್ತದೆ. ಅಲ್ಲಿ ಬಂಡವಾಳ ಹಿಂತಿರುಗಿ ಬರುವ ಮಾರ್ಗಗಳಿವೆ. ಅಲ್ಲಿ ಸ್ಯಾಟಿಲೈಟ್ ರೈಟ್ಸೇ ಎಪ್ಪತ್ತು ಎಂಬತ್ತು ಲಕ್ಷಕ್ಕೆ ಹೋಗುತ್ತದೆ. ನಮ್ಮಲ್ಲಿ ಈ ಚಿತ್ರಗಳನ್ನು ಯಾರೂ ಮೂಸಿಯೂ ನೋಡುತ್ತಿಲ್ಲ. ನಿಮಗೇ ಗೊತ್ತಿರುವಂತೆ ಕನ್ನಡದ ಕಲಾತ್ಮಕ ಚಿತ್ರಗಳ ಬಜೆಟ್ ಮೂವತ್ತು-ನಲವತ್ತು ಲಕ್ಷ ದಾಟಿಲ್ಲ. ಮಿತಿಗಳಲ್ಲೇ ಕೆಲಸ ಮಾಡಬೇಕು. ಸಹಜವಾಗಿ ಅದರ ಕೊರತೆ ನಮ್ಮ ಚಿತ್ರಗಳ ಮೇಲೆ ಆಗುತ್ತದೆ. ಮರಾಠಿಯಲ್ಲಿ ಅತ್ಯುತ್ತಮ ಚಿತ್ರಗಳನ್ನು ತಯಾರಿಸುತ್ತಿದ್ದಾರೆ. ಅವರ ಮಲ್ಟಿಪ್ಲೆಕ್ಸ್‍ಗಳಲ್ಲಿ ಮರಾಠಿ ಚಿತ್ರ ಪ್ರದರ್ಶಿಸಲೇಬೇಕು ಎಂಬ ಕಾನೂನಿದೆ. ಅಲ್ಲಿ `ಎ’ ಗ್ರೇಡ್ ಚಿತ್ರಕ್ಕೆ ನಲವತ್ತು ಲಕ್ಷ, `ಬಿ’ ಗ್ರೇಡ್ ಚಿತ್ರಕ್ಕೆ ಮೂವತ್ತು ಲಕ್ಷ ಸಬ್ಸಿಡಿ ಕೊಡುತ್ತಾರೆ. ನಮ್ಮಲ್ಲಿ ನೂರು ಚಿತ್ರಗಳಿಗೆ ತಲಾ ಹತ್ತು ಲಕ್ಷ ಹಂಚುತ್ತಾರೆ! ಜೊತೆಗೆ ನಮ್ಮಲ್ಲಿ ಏಕೋ ಈ ಚಿತ್ರಗಳ ಕುರಿತು ಅವಗಣನೆ ಹೆಚ್ಚು. ನೀವು ನಮ್ಮ ಚಿತ್ರಗಳ ಕುರಿತು ಮಾತಾಡುತ್ತಿದ್ದೀರಲ್ಲ ಥ್ಯಾಂಕ್ಸ್!

(೨೬ ಮಾರ್ಚ್ ೨೦೧೪ ರಂದು ‘ಕನ್ನಡಪ್ರಭ’ದಲ್ಲಿ ಪ್ರಕಟವಾದ ಸಂದರ್ಶನ)

1 ಟಿಪ್ಪಣಿ

  1. Jagadish Holeppagol

    Bahushya e cinema nimma vibhinna chitragaligella vibhinna aiti… neevu uttar karnatakad bhashe mattu shaili erdannu sariyaagi madiddiri….andre modalu uttara karnataka bhashey kelavu cinema nodidde but avu yavu nanag ashtodu hidisiddila…..iddiddanna idda haage torsiddiri…..olleyadagali

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s