ಪುಟ್ಟಕ್ಕನ ಹೆದ್ದಾರಿ!
ಸುಮಾರು ಏಳೆಂಟು ವರ್ಷಗಳ ಹಿಂದಿನ ಮಾತು.
ಆಗ ನಾನು ಕರ್ನಾಟಕ ಟೆಲಿವಿಷನ್ ಸಂಘಟನೆಯ ಅಧ್ಯಕ್ಷನಾಗಿದ್ದೆ, ಗೆಳೆಯ ಬಿ.ಸುರೇಶ ಕಾರ್ಯದರ್ಶಿಯಾಗಿದ್ದ. ದಾವಣಗೆರೆಯಲ್ಲಿ ನಮ್ಮ ಸಂಘಟನೆಯಿಂದ ಮನರಂಜನಾ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದೆವು. ಹಾಗಾಗಿ ಒಂದು ತಿಂಗಳುಗಳ ಕಾಲ ದಾವಣಗೆರೆಗೂ ಬೆಂಗಳೂರಿಗೂ ವಾರಕ್ಕೆ ಎರಡು ಮೂರು ಬಾರಿಯಂತೆ ಕಾರಿನಲ್ಲಿ ಹೋಗಿ ಬಂದು ಮಾಡುತ್ತಿದ್ದೆವು.
ತುಮಕೂರು ದಾಟಿದ ನಂತರ ವಾಜಪೇಯಿ ಕನಸಿನ ಕೂಸಾದ ಷಟ್ಪಥದ ಹೆದ್ದಾರಿ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತಿತ್ತು. ಆಗಿನ್ನೂ ಈ ‘ನೈಸ್’ ಇತ್ಯಾದಿಗಳು ಬಂದಿರಲಿಲ್ಲ. ಕರ್ನಾಟಕದ ಮಟ್ಟಿಗೆ ಇದೇ ದೊಡ್ಡ ಹೆದ್ದಾರಿ. ಸಾವಿರಾರು ಜನ ಬೆವರು ಹರಿಸಿ ರಸ್ತೆ ಕೆಲಸ ಮಾಡುತ್ತಿದ್ದರು. ಹೆದ್ದಾರಿ ಬದಿಯ ಅಕ್ಕ-ಪಕ್ಕದ ರೈತರು ಅದನ್ನು ಅಚ್ಚರಿ, ಬೆರಗು, ಭಯದಿಂದ ನೋಡುತ್ತಾ ನಿಂತಿರುತ್ತಿದ್ದರು. ಉದ್ದಕ್ಕೂ ಬೆಳೆಯುತ್ತಾ ಹೋಗುತ್ತಿದ್ದ ಹೆಬ್ಬಾವು ಮಾದರಿಯ ಈ ಹೆದ್ದಾರಿ, ಬದಿಯ ಹೊಲ-ಗದ್ದೆಗಳಲ್ಲೆಲ್ಲಾ ನುಂಗುತ್ತಾ ಹೋಗುತ್ತಿತ್ತು. ಹಳ್ಳಿಯ ಹಿನ್ನೆಲೆಯಿಂದ ಬಂದ ನನಗೆ ಕೃಷಿ ಭೂಮಿಯ ಕಬಳಿಕೆ ಕೊಂಚ ಕಸಿವಿಸಿಯನ್ನು ಉಂಟು ಮಾಡಿತ್ತು. ಈ ಅಭಿವೃದ್ಧಿ ಎಂಬ ಮರೀಚಿಕೆಯಯ ಲಾಭ-ನಷ್ಟಗಳ ವಿಚಾರವಾಗಿ ಸುರೇಶ-ನಾನು ಮಾತಾಡುತ್ತಾ ಸಾಗುತ್ತಿದ್ದೆವು…
‘ಇದು ಸಿನಿಮಾಗೆ ಒಳ್ಳೇ ಸಬ್ಜೆಕ್ಟ್… ನಾವು ಇದನ್ನೇ ಇಟ್ಟುಕೊಂಡು ಒಂದು ಒಳ್ಳೇ ಸಿನಿಮಾ ಮಾಡಬಹುದು…’ ಎಂದು ಸುರೇಶ ಪದೇ ಪದೇ ಹೇಳುತ್ತಿದ್ದ. ಆಗ ಸುರೇಶನ ತಲೆಯಲ್ಲಿ ಪುಟ್ಟಕ್ಕ ಹೊಕ್ಕಿದ್ದಳೋ ಇಲ್ಲವೋ ಗೊತ್ತಿಲ್ಲ. ನಂತರದ ದಿನಗಳಲ್ಲಿ ಅವನಲ್ಲಿ ಚಿಗುರೊಡೆಯುತ್ತಾ ಹೋದ ಯೋಚನೆ ಕ್ರಮೇಣ ಗಟ್ಟಿಯಾಗಿ ಇಂದು ‘ಪುಟ್ಟಕ್ಕನ ಹೈವೇ’ ಆಗಿ ರೂಪಾಂತರವಾಗಿದೆ. ಚಿತ್ರ ನೋಡಿ ನನಗೆ ಸಂತೋಷವಾಯಿತು. ಜೊತೆಗೆ ಇದೆಲ್ಲಾ ನೆನಪಿಗೆ ಬಂತು, ಪ್ರಸ್ತುತ ಜ್ವಲಂತ ಸಮಸ್ಯೆಗೆ ಸೃಜನಶೀಲನೊಬ್ಬ ಪ್ರತಿಕ್ರಿಯಿಸಿರುವ ರೀತಿ ಇದು. ಚಿತ್ರ ಈ ಸಮಸ್ಯೆಗೆ ಉತ್ತರವನ್ನೇನೂ ಕೊಡುವುದಿಲ್ಲ; ಕೊಡಬೇಕು ಎನ್ನುವುದೂ ಉಚಿತವಲ್ಲ. ಆದರೆ ಒಂದು ಪ್ರಮುಖ ಸಮಸ್ಯೆಯ ಮೇಲೆ ಬೆಳೆಕು ಚಲ್ಲುವುದರೊಂದಿಗೆ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುತ್ತದೆ.
ಮೊನ್ನೆ ಮೊನ್ನೆ ಅದೇ ರಸ್ತೆಯಲ್ಲಿ ಚಿತ್ರದುರ್ಗದವರೆಗೆ ಹೋಗಿ ಬಂದೆ. ಈಗ ರಸ್ತೆ ಸಂಪೂರ್ಣವಾಗಿ ಸಿದ್ಧವಾಗಿ ಬಳಕೆಯಾಗುತ್ತಿದೆ. ಉದ್ದಕ್ಕೂ ಅಕ್ಕ-ಪಕ್ಕ ಬೇಲಿಯೆಂಬ ಕೋಟೆಯನ್ನು ಭದ್ರವಾಗಿ ಕಟ್ಟಿಕೊಂಡಿದೆ. ಈಗಲೂ ಅಲ್ಲಲ್ಲಿ ಮಕ್ಕಳು ಅಚ್ಚರಿ, ಬೆರಗಿನಿಂದ ಓಡಾಡುವ ಕಾರು, ಬಸ್ಸುಗಳನ್ನು ನೋಡುತ್ತಿರುವುದು ಕಾಣುತ್ತದೆ. ಅಭಿವ್ರೃದ್ಧಿಯ ಸುಖಕ್ಕೆ ತಮ್ಮ ಬದುಕನ್ನು ದಾರೆ ಎರೆದುಕೊಟ್ಟ ಹಳ್ಳಿಗರು ಬೇಲಿಯಾಚೆ ತಮ್ಮ ನಿತ್ಯದ ಬದುಕನ್ನು ಕಟ್ಟಿಕೊಳ್ಳಲು ಒದ್ದಾಡುತ್ತಿದ್ದಾರೆ…
ರಸ್ತೆ ಮಧ್ಯೆ ವಿಶ್ರಾಂತಿಗಾಗಿ ನಿಲ್ಲಿಸಿದಾಗ ಒಬ್ಬ ರೈತ ಭೇಟಿಯಾದ. ಅವನ ಹೆಸರು ಭೋಜಣ್ಣ. ಅವನ ಹಳ್ಳಿ ಇರುವುದು ಹೆದ್ದಾರಿಯ ಬಲಗಡೆ. ಜಮೀನು ಇರುವುದು ರಸ್ತೆಯ ಎಡಗಡೆ. ಹೆದ್ದಾರಿ ಇವನ ಬದುಕನ್ನು ಇಭ್ಭಾಗಿಸಿಬಿಟ್ಟಿದೆ! ಮುಂಚೆಯೆಲ್ಲಾ ಹೊಲದ ಕೆಲಸಕ್ಕೆ ಸಲೀಸಾಗಿ ರಸ್ತೆ ದಾಟಿ ಬರುತ್ತಿದವನು ಈಗ ಬಲಬದಿಯಿಂದ ಎಡಬದಿಗೆ ಬರಬೇಕಾದರೆ ಕೆಲವು ಕಿಲೋಮೀಟರ್ ನಡೆದು, ಸುರಂಗದಲ್ಲಿ ದಾಟಿ iತ್ತೆ ಕೆಲವು ಕಿಲೋಮೀಟರ್ ನಡೆದು ತನ್ನ ಹೊಲ ತಲಪಬೇಕು! ಮುಂಚೆ ಕಲ್ಲೆಸೆತದ ದೂರದಲ್ಲಿದ್ದ ಅವನ ಹೊಲ ಈಗ ಗಾವುದ ದೂರ. ನನ್ನ ಹೊಲವನ್ನು ಮಾರಬೇಕೆಂದಿದ್ದೇನೆ, ಯಾರಾದರೂ ಪಟ್ಟಣದವರು ಕೊಳ್ಳಲು ಬರುತ್ತಾರೆಯೇ ಎಂದು ಕಾದಿದ್ದೇನೆ ಎಂದ..
ಇಂಥ ಹಲವಾರು ನೋವಿನ ಕಥೆಗಳು ಹೆದ್ದಾರಿಯ ಮೋಟಾರಿನ ಸದ್ದಿನಲ್ಲಿ ತಮ್ಮ ಧ್ವನಿ ಕಳೆದುಕೊಂಡಿವೆ. ಕಾರಿನವರ ಮುಖದಲ್ಲಿ ರಸ್ತೆ ಮೇಲೆ ತೇಲಿ ಹೋಗುವ ಸುಖದ ನಗು ಇದ್ದರೆ, ರೈತರಲ್ಲಿ ವಿಷಾದವಿದೆ.
ಈ ಹಿನ್ನೆಲೆಯಲ್ಲಿ ರೂಪುಗೊಂಡಿರುವ ‘ಪುಟ್ಟಕ್ಕನ ಹೈವೇ’ ವಿಭಜನೆಗೊಂಡ ಸಾಮಾನ್ಯನ ಬದುಕನ್ನು ನಮ್ಮ ಮುಂದೆ ಸಾಕಾರಗೊಳಿಸುತ್ತದೆ. ಚಿತ್ರದಲ್ಲಿ ಬರುವ ಪುಟ್ಟಕ್ಕ, ಅಂಬಕ್ಕ, ಚಿನ್ನು, ಚನ್ನಯ್ಯ, ಮಾದಯ್ಯ… ಎಲ್ಲರೂ ಅಭಿವೃದ್ಧಿಯ ಹೊಡೆತಕ್ಕೆ ಬಿದ್ದವರೇ. ಇವರೆಲ್ಲಾ ಯಾವ ಹಾದಿ ಹಿಡಿಯಬೇಕು?
ಚಿತ್ರ ಹೇಳುವಂತೆ: ಅಭಿವೃದ್ಧಿ ಎನ್ನುವುದು ಎಲ್ಲ ಆಡಳಿತ ಯಂತ್ರಗಳ ಮಂತ್ರ. ಈ ಅಭಿವೃದ್ಧಿಯಿಂದ ಲಾಭ ಪಡೆಯುವವರ ಸಂಖ್ಯೆ ಎಷ್ಟಿರುತ್ತದೋ ನಷ್ಟ ಅನುಭವಿಸುವವರ ಸಂಖ್ಯೆಯೂ ಅಷ್ಟೇ ಇರುತ್ತದೆ. ಈ ಹಿನ್ನೆಲೆಯಲ್ಲಿಯೇ ಒಬ್ಬರಿಗೆ ಒಳ್ಳೆಯದು ಅನ್ನಿಸುವುದು ಮತ್ತೊಬ್ಬರಿಗೆ ದೊಡ್ಡ ಅವಘಡ ಎನಿಸಲೂ ಬಹುದು… ಆದರೆ ಸಾಮಾನ್ಯವಾಗಿ ಇಲ್ಲಿ ಬಲಿಯಾಗುವವರು ಸಾಮಾನ್ಯ ಜನ. ಅಭಿವೃದ್ಧಿಯ ಹೆಚ್ಚಿನ ಅನುಕೂಲ ಹೊಂದುವವರು ಸ್ಥಿತಿವಂತರು. ಅದೇ ಚಿತ್ರದ ಹಾಡೊಂದು ಹೀಗೆ ಧ್ವನಿಸುತ್ತದೆ:
ಕಾಡಿಗೆ ದಾರಿಗಳ ಮುಚ್ಚುವುದೇ ಚಾಳಿ
ನಾಡಿಗೆ ದಾರಿಗಳ ಹುಡುಕುವುದೇ ಗೀಳು
ನಾಡಿನ ದಾರಿ ಕಾಡಿಗೆ ಬಿದ್ದರೆ
ಅಳಿಯುವುದೇ ದಾರಿ…
(೩ ಜುಲೈ ೨೦೧೧, `ಉದಯವಾಣಿ`ಯಲ್ಲಿ ಪ್ರಕಟ)
- Posted in: Uncategorized
I’m not quite sure how to say this; you made it exmlteery easy for me!